ಆಯುರ್ವೇದ ಅರಿವು ಮಾಲಿಕೆ – ೧೧

8 01 2011

ಶರೀರದ ಇರುವಿಕೆಗೆ “ಸಪ್ತ ಧಾತುಗಳು”

ದೇಹ ಅಥವಾ ಶರೀರ ಎಂಬ ಮೂರ್ತ ಸ್ವರೂಪವು ೭ ಬಗೆಯ ಮೂಲ ಧಾತುಗಳಿಂದಾಗಿ ಆಗಿದೆ. “ಧರಿಸುವ” ಮತ್ತು “ಪೋಷಿಸುವ” ಸಾಮರ್ಥ್ಯವಿರುವುದನ್ನು ಧಾತು ಎನ್ನುತ್ತಾರೆ.

ಮನೆಯಾಗಲು ಇಟ್ಟಿಗೆ, ಸಿಮೆಂಟ್, ಕಲ್ಲು, ಮರ ಇತ್ಯಾದಿಗಳು ಹೇಗೆಯೋ, ಹಾಗೆ ಈ ಶರೀರವೆಂಬ ಮನೆಗೆ ಸಪ್ತ ಧಾತುಗಳು ಅಗತ್ಯ. ಸಪ್ತ ಅಂದರೆ ೭, ಕ್ರಮವಾಗಿ ರಸಧಾತು, ರಕ್ತಧಾತು, ಮಾಂಸಧಾತು, ಮೇದಧಾತು, ಅಸ್ಥಿಧಾತು, ಮಜ್ಜಾಧಾತು ಹಾಗೂ ಶುಕ್ರಧಾತು ಎನ್ನಲಾಗಿದೆ.

 ಗಮನಿಸಿ: ಕೆಲವೊಂದು ಸಂದರ್ಭಗಳಲ್ಲಿ ಶರೀರದ ಧಾರಣೆಯ ಕೆಲಸ ಮಾಡುತ್ತಿರುವಾಗ ದೋಷಗಳನ್ನೂ ಧಾತುಗಳೆನ್ನಲಾಗುತ್ತದೆ, ಕಾರ್ಯಸೂಚಕವಾಗಿ!

 ೧. ರಸಧಾತು: ಶರೀರದಲ್ಲಿ ದ್ರವಸ್ವರೂಪದಲ್ಲಿದ್ದು, ಪೋಷಣೆಯ ಕೆಲಸ ಮಾಡುವ ಆಹಾರದ ಸಾರಭಾಗದ ಪರಿಣಾಮದಿಂದ ಉಂಟಾಗುವ ದುಗ್ಧರಸ ಇತ್ಯಾದಿ.

೨. ರಕ್ತಧಾತು: ರಕ್ತವರ್ಣವಿರುವ ದ್ರವ. ರಕ್ತಕಣಗಳು.

೩. ಮಾಂಸಧಾತು: ಮೃದುವಾದ ಮತ್ತು ಶರೀರವನ್ನು ತುಂಬಿಸುವ ಮಾಂಸಪೇಶಿಗಳು ಇತ್ಯಾದಿ.

೪. ಮೇದೋಧಾತು: ಕೊಬ್ಬಿನಂಶ, ಮೇದಸ್ಸು. ಸ್ನಿಗ್ಧತೆಯನ್ನು ನೀಡುತ್ತದೆ.

೫. ಅಸ್ಥಿಧಾತು: ಆಕಾರ ಮತ್ತು ಆಧಾರ ಕೊಡುವ ಮೂಳೆ ಇತ್ಯಾದಿ.

೬. ಮಜ್ಜಾಧಾತು: ಮೂಳೆಗಳನ್ನು ತುಂಬುವ ಮಜ್ಜೆ. ದೇಹಕ್ಕೆ ಬಲ ನೀಡುತ್ತದೆ.

೭. ಶುಕ್ರಧಾತು: ಪ್ರಜನನಕ್ಕೆ ಅಗತ್ಯವಾದ ವೀರ್ಯ, ಅಂತಃಸ್ರಾವಗಳು ಇತ್ಯಾದಿ.

 ಈ ಪ್ರತಿಯೊಂದು ಧಾತುವಿಗೂ ಅದರದ್ದೇ ಆದ ಸ್ಥಾನ, ಪ್ರಮಾಣ ಮತ್ತು ಕಾರ್ಯವಿರುತ್ತದೆ. ಅವುಗಳಲ್ಲಿ ಏರುಪೇರಾದರೆ ಖಾಯಿಲೆಗಳು ಉಂಟಾಗುತ್ತವೆ. ದೋಷಗಳು ಧಾತುಗಳಲ್ಲಿ ಸೇರಿ ವಿವಿಧ ರೋಗಗಳನ್ನು ಉಂಟುಮಾಡಬಲ್ಲವು.

 ಮೇಲೆ ಹೇಳಿದ ಕ್ರಮದಲ್ಲಿ ಪ್ರತಿಯೊಂದು ಧಾತುವೂ ತನಗೆ ಬೇಕಾದ ಪೋಷಣೆಯನ್ನು ತನ್ನ ಹಿಂದಿನ ಧಾತುವಿನಿಂದ ಪಡೆಯುತ್ತದೆ. ಅಂದರೆ, ಆಹಾರ > ಆಹಾರರಸ > ರಸ > ರಕ್ತ > ಮಾಂಸ >>>>ಶುಕ್ರ ಹೀಗೆ. ಎಲ್ಲದರ ಕೊನೆಯಲ್ಲಿ, ಅವೆಲ್ಲದರ ಸಾರವಾದ “ಓಜಸ್ಸು” ನಿರ್ಮಾಣಗೊಳ್ಳುತ್ತದೆ. ಇದುವೇ ವ್ಯಕ್ತಿಯ ಆರೋಗ್ಯ, ಬದುಕು ಮತ್ತು ಸಾವಿಗೆ ಕಾರಣ. ಉತ್ತಮ ಓಜಸ್ಸೆಂದರೆ ಉತ್ತಮ ಆರೋಗ್ಯ. ಆದ್ದರಿಂದಲೇ ನಾವು ಸೇವಿಸುವ ಆಹಾರವು ಉತ್ತಮವಾಗಿರಬೇಕಾದ್ದು ಅತಿ ಮುಖ್ಯ.








Follow

Get every new post delivered to your Inbox.