ನಮ್ಮ ಬದುಕಿಗೆ ’ದೋಷಗಳು’ ಬೇಕು….!
ಇದೇನು ಹೇಳುತ್ತಿದ್ದೀರಿ ಎನ್ನುತ್ತೀರಾ? ಆಧ್ಯಾತ್ಮದ ಬಗ್ಗೆ ಹೇಳುತ್ತಿದ್ದೇನೆ ಅಂದುಕೊಂಡಿರಾ? ಯಾವುದೂ ಅಲ್ಲ, ಆಯುರ್ವೇದವನ್ನೇ ಹೇಳುತ್ತಿದ್ದೇನೆ….
ಹಿಂದಿನ ಸಂಚಿಕೆಯಲ್ಲಿ ಹೇಳಿದ ಮಹಾಭೂತಗಳು ಬಹುಶಃ ರಚನಾತ್ಮಕವಾಗಿ ಕಾರ್ಯ ಮಾಡಿದರೆ, ಈ ದೋಷಗಳು ಕ್ರಿಯಾತ್ಮಕವಾದವು. ನಮ್ಮ ದೇಹ ಪ್ರಕೃತಿ, ಆರೋಗ್ಯದ ಪಾಲನೆ, ಜೈವಿಕ ಕ್ರಿಯೆಗಳು ಮತ್ತು ಅನಾರೋಗ್ಯ ಇವೆಲ್ಲವೂ ಪ್ರಮುಖವಾಗಿ ದೋಷಗಳನ್ನೇ ಅವಲಂಬಿಸಿವೆ. ಆ ದೋಷಗಳು ಮಹಾಭೂತಗಳ ಸೂಕ್ಷ್ಮ ಹಾಗೂ ಕ್ರಿಯಾಭಾಗಗಳ ಸಂಯೋಗದಿಂದಲೇ ಆಗಿವೆ. ಅದು ಈ ಕೆಳಗಿನಂತೆ,
೧. ವಾತದೋಷ: ವಾಯು + ಆಕಾಶ
೨. ಪಿತ್ತದೋಷ: ಅಗ್ನಿ + ಜಲ
೩. ಕಫದೋಷ: ಜಲ + ಪೃಥ್ವಿ
ಈ ಮೇಲಿನ ದೋಷಗಳು ಆಯುರ್ವೇದದ ಎಲ್ಲಾ ಬಗೆಯ ಚಿಕಿತ್ಸೆ, ಸಲಹೆ, ಕ್ರಮಗಳಿಗೆ ಮೂಲಾಧಾರಗಳು. ಅವುಗಳನ್ನು ಅರ್ಥಮಾಡಿಕೊಳ್ಳದೆ ಆಯುರ್ವೇದದ ಪ್ರಯೋಗ ನಿರರ್ಥಕ ಅಥವಾ ಕತ್ತಲಲ್ಲಿ ಕಲ್ಲು ಹೊಡೆದಂತೆ !
ಇಷ್ತೆಲ್ಲ ಮಹತ್ತ್ವದ ಇವುಗಳನ್ನು ದೋಷ ಎಂದು ಹೇಳುವುದೇಕೆ?
ಪ್ರಕೃತಿರಾರಂಭಕತ್ವೇ ಸತಿ ಸ್ವತಂತ್ರೇಣ ದುಷ್ಟಿಕರ್ತೃತ್ವಂ ದೋಷತ್ವಂ
ಎಂದು ಗ್ರಂಥಗಳಲ್ಲಿ ಹೇಳಿದ್ದಾರೆ. ಅಂದರೆ ಯಾವುದಕ್ಕೆ ದೇಹಪ್ರಕೃತಿಯನ್ನು ಉಂಟುಮಾಡುವ ಶಕ್ತಿಯಿದೆಯೋ ಹಾಗೂ ತನ್ನಷ್ಟಕ್ಕೆ ಏನನ್ನೂ ಅವಲಂಬಿಸದೆ ದೇಹದ ದೂಷಣೆ ಮಾಡುವ ಶಕ್ತಿಯಿದೆಯೋ ಅದು ದೋಷವು.
ದೋಷಗಳನ್ನು ದೂಷಣೆಮಾಡುವ ಸ್ವಭಾವದಿಂದಲೇ ಗುರುತಿಸುವುದರಿಂದ ಈ ಹೆಸರು. ಅವು ಪ್ರಾಕೃತಿಕ ಕೆಲಸಗಳನ್ನು ಮಾಡುವಾಗ ಹಲವು ಬಾರಿ ’ಧಾತು’ (ದೇಹಕ್ಕೆ ಆಧಾರ) ಗಳೆಂದೇ ಕರೆಯಲಾಗುತ್ತದೆ. ಆದರೂ, ದೂಷಣೆಯಾಗಲು ಅವುಗಳು ಅತ್ಯಗತ್ಯವಾದುದರಿಂದ ದೋಷವೆಂಬುದೇ ಅತಿ ಸೂಕ್ತವಾಯಿತು. ಅಲ್ಲದೆ, ಅವುಗಳ ಇರುವಿಕೆಯೂ ಕೂಡ ದೂಷಣೆಯುಂಟಾದಾಗಲೇ ಹೆಚ್ಚಾಗಿ ಅರಿವಾಗುವುದು.
ಇಲ್ಲಿ ದೂಷಣೆಯೆಂದರೆ, ಹಾಳುಮಾಡುವುದು ಎಂದಂತೆ. ಅಂದರೆ ಸಹಜ ಮತ್ತು ಆರೋಗ್ಯಕರ ಕ್ರಿಯೆಗಳ ಏರುಪೇರು. ಇದರಿಂದ ತಾತ್ಕಾಲಿಕವಾದ ತೊಂದರೆಗಳು ಅಥವಾ ದೀರ್ಘಕಾಲೀನ / ಗಂಭೀರ ತೊಂದರೆ (ಖಾಯಿಲೆ) ಗಳು ಉಂಟಾಗುತ್ತವೆ. ಹಾಗಾದರೆ ಅವು ದೋಷಗಳು ಸರಿ ತಾನೆ?
ದೋಷಗಳ ಗುಣ-ಧರ್ಮಗಳು ಇತ್ಯಾದಿಗಳನ್ನು ಮುಂದೆ ವಿವರಿಸುತ್ತೇನೆ. ನಮಸ್ಕಾರ






Dr. Pitta gandi andre yenu
ಪಿತ್ತಗಂಧೆ ಎಂಬುದು ಶರೀರದ ಮೇಲೆ ಕೆಂಪನೆಯ, ತುರಿಕೆಯುಳ್ಳ ಅಲರ್ಜಿಯಂತಹ ಗಂಧೆಗಳುಂಟಾಗುವ ತೊಂದರೆಯ ಹೆಸರು. ಆಯುರ್ವೇದ ರೀತ್ಯಾ ಇದು ಪಿತ್ತ ಮತ್ತು ರಕ್ತದ ತೊಂದರೆಯಿಂದ ಬರುತ್ತದೆ. ಜೊತೆಯಲ್ಲಿ ಕಫದ ದುಷ್ಟಿ ಕೂಡಾ ಇರಬಹುದು. ಅನೇಕ ಬಗೆಯ ಅಲರ್ಜಿಗಳಲ್ಲಿ ಇದು ಉಂಟಾಗುತ್ತದೆ ಹಾಗೂ ಕೆಲವೊಮ್ಮೆ ಬೇರೆ ಅಂಗವ್ಯೂಹಗಳ ಖಾಯಿಲೆಗಳಲ್ಲೂ ಕಾಣಿಸಬಹುದು.